ಸಂಪಾಜೆ ಯಕ್ಷೋತ್ಸವ: ಡಾ. ಕೀಲಾರು ಸಂಸ್ಮರಣೆ, ಸನ್ಮಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ನವ೦ಬರ್ 2 , 2014
|
ನವ೦ಬರ್ 2, 2014
|
ಸಂಪಾಜೆ ಯಕ್ಷೋತ್ಸವ: ಡಾ. ಕೀಲಾರು ಸಂಸ್ಮರಣೆ, ಸನ್ಮಾನ
ಸುಳ್ಯ :
ಎಲ್ಲರನ್ನು ಒಂದುಗೂಡಿಸುವುದು ಕಲೆ. ಸಮಾಜದಲ್ಲಿ ಇಂತಹ ಜೀವಂತ ಕಲೆ ಇದ್ದಾಗ ಮಾತ್ರ ಸ್ವಾಸ್ಥ್ಯ ಸಮಾಜ ಗಟ್ಟಿಯಾಗುತ್ತದೆ. ಈ ಶ್ರೀಮಂತ ಯಕ್ಷಗಾನ ಕಲೆ ಸಂಸ್ಕೃತಿ, ಆಧ್ಯಾತ್ಮ, ಧರ್ಮ, ಸಂಸ್ಕಾರ ಉಳಿಸುವ ಕೆಲಸ ಮಾಡುತ್ತದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ನುಡಿದರು.
ಕಲ್ಲುಗುಂಡಿ ಶಾಲಾ ವಠಾರದಲ್ಲಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ನಡೆದ ಡಾ. ಕೀಲಾರು ಸಂಸ್ಮರಣೆ ಮತ್ತು ಸಂಪಾಜೆ ಯಕ್ಷೋತ್ಸವ, ಸನ್ಮಾನ, ಶೇಣಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರು ಇಲ್ಲಿ ಎರಡೂವರೆ ದಶಕದಿಂದ ಯಕ್ಷ ಉತ್ಸವ ನಡೆಯುತ್ತಿದೆ. ಇದು ಕಲೆಯನ್ನು ಉಳಿಸಿ, ಬೆಳೆಸುವ ಪರಿ. ಈ ಕಲಾ ಸೇವೆಗೆ ಕಲಾಸಕ್ತರು ಮಾತ್ರ ಅಲ್ಲದೆ ದೇವರು ಕೂಡಾ ಸಂತಷ್ಟನಾಗುತ್ತಾನೆ ಎಂದು ನುಡಿದರು.
ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಅಚ್ಚಗನ್ನಡ ಉಳಿದಿರುವುದು ಯಕ್ಷಗಾನ ದಲ್ಲಿ. ಸಾರ್ವಕಾಲಿಕ ಕಲೆ ಯಕ್ಷಗಾನ. ಆದರೆ ಯಕ್ಷಗಾನ ಕಲೆ ಉಳಿಸುವ ಸವಾಲು ನಮ್ಮ ಮುಂದೆ ಇರುವ ಹಿನ್ನೆಲೆಯಲ್ಲಿ ಈ ಯಕ್ಷೋತ್ಸವ ದೊಡ್ಡ ಕೊಡುಗೆ. ಈ ಕಾರ್ಯ ನಿರಂತರ ನಡೆಯಲಿ ಎಂದರು. ಖ್ಯಾತ ಸಾಹಿತಿ ಎಸ್.ಆರ್. ವಿಜಯಶಂಕರ ಅವರು ಡಾ. ಕೀಲಾರು ಗೋಪಾಲಕೃಷ್ಣಯ್ಯ ಅವರ ಬಗ್ಗೆ ಸಂಸ್ಮರಣಾ ಭಾಷಣ ಮಾಡಿದರು.
ಖ್ಯಾತ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಬಿ.ಸಿ. ರೋಡ್ ಅವರಿಗೆ ಶೇಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೈದಿಕ ವಿದ್ವಾಂಸ ವೇಮೂ ಕಿಳಿಂಗಾರು ನಡು ಮನೆ ಗೋಪಾಲಕೃಷ್ಣ ಭಟ್ ಅವರಿಗೆ ಅಭಿನಂದನೆ ನಡೆಯಿತು. ಗಾನಕೋಗಿಲೆ ದಿನೇಶ್ ಅಮ್ಮಣ್ಣಾಯ ಅವರಿಗೆ ಸನ್ಮಾನ ನಡೆಯಿತು. ಪ್ರಸಿದ್ಧ ಯಕ್ಷಗಾನ ಕಲಾವಿದ ವಾಸುದೇವ ರಂಗಾ ಭಟ್ ಅಭಿನಂದನಾ ಭಾಷಣ ಮಾಡಿದರು. ಪ್ರತಿಷ್ಠಾನದ ಡಾ.ರಾಜಾರಾಮ ಕೀಲಾರು, ಸರವು ರಾಮ ಭಟ್, ಸುಮನಾ ಶ್ಯಾಮ್ ಭಟ್, ಟಿ. ಶ್ಯಾಮ್ ಭಟ್, ಮುರಳೀಧರ ಉಪಸ್ಥಿತರಿದ್ದರು. ಹಿರಣ್ಯ ವೆಂಕಟೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.
ಉತ್ಸವಕ್ಕೆ ಬಂದ ಎಲ್ಲರಿಗೂ ಊಟ, ಚಾ, ತಿಂಡಿ ನಿರಂತರ ವ್ಯವಸ್ಥೆ ಇತ್ತು. ಸಂಜೆ 5ರಿಂದ ಯಕ್ಷಗಾನ ಆರಂಭ ಗೊಂಡಿದ್ದು, ಶಿವಕಾರುಣ್ಯ, ಭೀಷ್ಮ ಪ್ರತಿಜ್ಞೆ, ವಂಶವಾಹಿನಿ, ಅಮೃತ ಕಲಶ ಪ್ರಸಂಗ ಪ್ರದರ್ಶನಗೊಂಡಿತು.
ವಿದ್ಯೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅನಾರೋಗ್ಯದ ಮಂದಿಗೆ ಚಿಕಿತ್ಸೆಗೆ ಧನಸಹಾಯ ನೀಡಲಾಗುತ್ತದೆ. ಈ ಬಾರಿ 476 ಮಂದಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಅಲ್ಲದೆ ಆರೋಗ್ಯ ಚಿಕಿತ್ಸೆಗೆ ಧನಸಹಾಯ ನೀಡಲಾಯಿತು. ಅಲ್ಯುಮಿನಿಯಂ ಶೀಟ್ ಬಳಸಿ ದೊಡ್ಡ ಚಪ್ಪರ ಹಾಕಲಾಗಿತ್ತು. ದ.ಕ., ಉಡುಪಿ, ಕಾಸರಗೋಡು, ಉತ್ತರ ಕನ್ನಡ ಅಲ್ಲದೆ ಬೆಂಗಳೂರು, ಮುಂಬಯಿಯಿಂದ ಯಕ್ಷಪ್ರಿಯರು ಬಂದಿದ್ದರು.
ಕೃಪೆ :
http://www.vijaykarnataka.com
|
|
|